ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.

0
3238

ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. ‘ಪ್ಲಾಸ್ಟಿಕ್ ಡಬ್ಬ’ ಅಥವಾ ‘ಕಂಟೇನರ್’, ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು ಯುವಕರ, ಯುವತಿಯರ, ಉದ್ಯೋಗಿಗಳ ಮತ್ತು ಸಮಯವಿಲ್ಲದವರ ರುಚಿಯಾದ ಆಹಾರ ಸಾಗಿಸುವ ಆಪಧ್ಬಾಂದವ.

ಸದಾ ಉರಿಯುತ್ತಿದ್ದ ಅಡುಗೆ ಮನೆಯ ಒಲೆಗೆ ಸೀದಾ ಸೀದಾ ರಜೆ ಘೋಷಿಸಿ ಟಿ.ವಿ ಮುಂದೆ ಕೂತು ಬೇಕಾದ್ದು ತರಿಸಿಕೊಂಡು ತಿನ್ನಬಹುದಾದಷ್ಟು ಬದುಕನ್ನು ಸುಲಭಗೊಳಿಸಿದ ಮಹಾ ಉಪಕಾರಿ. ಕೆಲವೊಮ್ಮೆ ಅನಿವಾರ್ಯಕ್ಕೆ ಹೋಟೆಲ್ ಇಂದ ಆಹಾರ ತರಿಸಿಕೊಂಡು ತಿನ್ನುವಾಗ ಇದನ್ನು ಕಂಡು ಅನಿಸುತ್ತಿದ್ದುದು ಒಂದೇ. ಈ ಪ್ಲಾಸ್ಟಿಕ್ ಡಬ್ಬದ ಬಿಸಿ ಬಿಸಿ ರುಚಿಯಾದ ಊಟ ತಿನ್ನುತ್ತಿರುವುದು ಬದುಕಲಾ ಅಥವಾ ಸಾಯಲು? ಈ ಡಬ್ಬಾ ಎನ್ನುವ ಉಪಕಾರಿ ವಿಚಾರ ಏನೋ ಸರಿಯಿಲ್ಲ ಅನ್ನಿಸಿ ಸುಮ್ಮನೆ ಕೂತು ಗೂಗಲ್ ಕೆಣಕಿದಾಗ ಸಿಕ್ಕಿದ್ದು ಇಷ್ಟು.

ಈ ನಗರ ಪ್ರದೇಶದಲ್ಲಿ ಹೋಟೆಲ್ ನಿಂದ ರುಚಿಯಾದ ಆಹಾರ ಸೀದಾ ಮನೆ ಬಾಗಿಲಿಗೇ ತಲುಪಿಸುವ ಅದೆಷ್ಟೋ ಕಂಪೆನಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಗಿಮಿಕ್. ಒಟ್ಟಿನಲ್ಲಿ ಅಡುಗೆ ಮನೆಯ ಒಲೆ ಹಚ್ಚಬಾರದು ಅಷ್ಟೇ ಉದ್ದೇಶ. ನೋ ಕುಕಿಂಗ್ ಡೇ, ನೋ ಕುಕಿಂಗ್ ಮಂತ್ ಎಂಬ ವಿಲಕ್ಷಣ ಆಚರಣೆ ತಲೆಯೊಳಗೆ ತುಂಬಿ ಹೇಗೋ ಒಂದು ಆರ್ಡರ್ ಗಿಟ್ಟಿಸಿಕೊಳ್ಳುವಷ್ಟು ಬುಧ್ಧಿವಂತರು ಅವರು. ಬೆಂಗಳೂರು ದೇಶದಲ್ಲೇ ನಂ 1 ಫುಡ್ ಡೆಲಿವರಿ ಮಾಡುವ ನಗರ. ಅತೀ ಹೆಚ್ಚು ಆನ್ಲೈನ್ ಫುಡ್ ಡೆಲಿವರಿ ಅಗುವುದು ಇಲ್ಲಿಯೇ! ಲೆಕ್ಕವಿಲ್ಲದಷ್ಟು ಫುಡ್ ಡೆಲಿವರಿ ಕಂಪನಿ ಮತ್ತು ಸೇವೆಗಳಿವೆ.

ಪ್ರತೀ ನಿತ್ಯ ಸರಾಸರಿ 3 ಲಕ್ಷ ಆರ್ಡರ್ಸ್ ಡೆಲಿವರಿ ನಡೆಯುತ್ತದೆ. ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ ಎಂದು ಪೇಪರ್ ಕವರ್ ಕೈಗಿಡುವ ಡೆಲಿವರಿ ಕಂಪೆನಿಗಳು ಅದರೊಳಗೆ ಕಡಿಮೆಯೆಂದರೂ ಎರಡು ಪ್ಲಾಸ್ಟಿಕ್ ಡಬ್ಬ ಮತ್ತು ಮೂರು ಪುಟ್ಟ ಪುಟ್ಟ ಪ್ಲಾಸ್ಟಿಕ್ ಕವರ್ ಗಳನ್ನು ಪ್ರತಿಷ್ಟಾಪಿಸಿರುತ್ತವೆ! ಬಿಸಿ ಬಿಸಿ ಆಹಾರ ಹೊತ್ತು ಬೆಚ್ಚಗೆ ಕುಳಿತಿರುವ ಇದೇ ಡಬ್ಬಗಳನ್ನು ಬಿಡಿಸಿ ತಿಂದು ಮುಗಿಸಿ ಬಿಸಾಕಿಬಿಟ್ಟರೆ ಅಂದಿನ ಕೆಲಸ ಮುಕ್ತಾಯ.
ಮುಂದೆ.

ಪ್ರತೀ ನಿತ್ಯ ಸರಾಸರಿ 3 ಲಕ್ಷ ಫುಡ್ ಡೆಲಿವರಿ ಮಾಡುವ ಕಂಪೆನಿಗಳ ತಿಂಗಳಿನ ಸರಾಸರಿ delivery ಸಂಖ್ಯೆ 9 ಮಿಲಿಯನ್ (90 ಲಕ್ಷ), ಅದೂ ಬೆಂಗಳೂರು ಒಂದರಲ್ಲೇ!, ಪ್ರತಿಯೊಬ್ಬರ ಆಹಾರವನ್ನು ಈ ಪೇಪರ್ ಕವರ್ ಒಳಗಿರುವ ಪ್ಲಾಸ್ಟಿಕ್ ಡಬ್ಬ ಮತ್ತು ಪುಟ್ಟ ಪುಟ್ಟ ಪ್ಲಾಸ್ಟಿಕ್ ಕವರ್ ಗಳಲ್ಲೇ ಸಾಗಿಸುವ ಈ ಅತೀ ಬುದ್ಧಿವಂತ ಫುಡ್ ಡೆಲಿವರಿ ಕಂಪೆನಿಗಳು ಪ್ರಪಂಚದಾದ್ಯಂತ ಉಂಟುಮಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಸರಾಸರಿ ಪ್ರಮಾಣ ವರ್ಷಕ್ಕೆ 1.45 ಮಿಲಿಯನ್ ಟನ್ (14.5 ಲಕ್ಷ ಟನ್). 1 Kg ಪ್ಲಾಸ್ಟಿಕ್ ನ ಸರಾಸರಿ ಕಾರ್ಬನ್ ಫೂಟ್,ಪ್ರಿಂಟ್ 6 Kg Co2.
ಹಸಿರುಮನೆ ಪರಿಣಾಮಕ್ಕೆ ಇದಕ್ಕಿಂತ ದೊಡ್ಡ ಕೊಡುಗೆ ಬೇಕಾ.

ಅತೀ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ನಿಂದ ತಯಾರಿಸುವ ಈ ಡಬ್ಬಾಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ Polyethylene, Polyvinyl ಕ್ಲೋರೈಡ್, ಮತ್ತು Polystyrene ಎಂಬ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಸಾವಿರಾರು ವರ್ಷಗಳಾದರೂ ಕೊಳೆತು ನಾಶವಾಗದ ಈ ಪೆಡಂಭೂತ ನೀರು ಮತ್ತು ಭೂಮಿಗೆ ಸೇರಿ ಮೊದಲು ಕೊಲ್ಲುವುದು ಏನೂ ಅರಿಯದ ಮೂಕ ಜೀವ ಪ್ರಭೇದಗಳನ್ನು.

ಇವುಗಳಿಂದ ಹೊರ ಬರುವ ಟಾಕ್ಸಿಕ್ ಪೃಕೃತಿಯ ಸಮತೋಲನ ಮತ್ತು ಸರಪಳಿಗೆ ಅತ್ಯಂತ ಮಾರಕ. ನಾಲಗೆ ರುಚಿಯ ತನಕ ಬಂದು ನಿಂತಿರುವ ಪೃಕೃತಿಯ ಮಾರಣಹೋಮ ಏನೂ ಅರಿಯದ ಮುಗ್ಧ ಜೀವಿಗಳ ಕೊಂದು ನಗುತ್ತಿರುವುದಂತೂ ಸತ್ಯ. ಅದರೆ ನಾವೇನು ಶಾಶ್ವತವೇ.

ನಿಗದಿ ಪಡಿಸಿದ ಸಮಯಕ್ಕಿಂತ ಮುನ್ನವೇ ಬಿಸಿ ಬಿಸಿ ಆಹಾರ ಕೈಗಿಟ್ಟು Rating ಕೊಡಿ ಸಾರ್ ಎಂದು ಹೇಳಿ ಹೊರಡುವ ಎಷ್ಟೋ delivery boy ಗಳ ಬದುಕು ಅದರಿಂದಲೇ ನಡೆಯುತ್ತಿರುವುದು ಸತ್ಯ, ಆದರೆ ಅದನ್ನು ಇದೇ ಪ್ಲಾಸ್ಟಿಕ್ ಡಬ್ಬದಿಂದ ಇಳಿಸಿ ಚಪ್ಪರಿಸಿ ತಿನ್ನುವ ನಮ್ಮ ಬದುಕು, ಆರೋಗ್ಯ ಏನಾಗುತ್ತಿದೆ ಗೊತ್ತಾ.

Polyethylene, Polyvinyl Chloride, ಮತ್ತು Polystyrene ಎಂಬ ರಾಸಾಯನಿಕದಿಂದ ತಯಾರಾದ ಈ ಪ್ಲಾಸ್ಟಿಕ್ ಡಬ್ಬ ಮತ್ತು ಕವರ್ ಗಳಿಗೆ ಬಿಸಿ ಆಹಾರ ಸುರಿದಾಗ ಸರಾಸರಿ 55% ಕ್ಕಿಂತ ಹೆಚ್ಚು ವೇಗವಾಗಿ Bisphenol(BPA), Phthalates ಮತ್ತು Styrene ಎಂಬ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗಿ ನಿಮ್ಮ ರುಚಿಯಾದ ಆಹಾರದೊಂದಿಗೆ ಸೇರಿ ಹೋಗುತ್ತವೆ. ಆರ್ಡರ್ ಮಾಡಿದ ಸರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡೆಲಿವರಿ ಬಾಯ್ ಜೊತೆಗೆ ಪ್ಲಾಸ್ಟಿಕ್ ಡಬ್ಬ ಮತ್ತು ಕವರ್ ಗಳಲ್ಲಿ ಮುಚ್ಚಿದ ಸ್ಥಿತಿಯಲ್ಲಿ ಮನೆಗೆ ಬರುವ ನಿಮ್ಮ ಆಹಾರ ಈ ಅಪಾಯಕಾರಿ ರಾಸಾಯನಿಕಗಳೊಂದಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಟ್ಟಿರುತ್ತದೆ, ಮತ್ತು ನಿಮಗೇ ತಿಳಿಯದೆ ಕೊಲ್ಲುವ ವಿಷವಾಗಿರುತ್ತದೆ! ಪರಿಣಾಮವೇನು.

Bisphenol(BPA), Phthalates ಮತ್ತು Styrene ಎಂಬ ಅಪಾಯಕಾರಿ ರಾಸಾಯನಿಕಗಳು ಬೆರೆತ ಆಹಾರಗಳ ನಿಯಮಿತ ಸೇವನೆಯಿಂದ ಅತ್ಯಂತ ಹೆಚ್ಚು ಹಾರ್ಮೋನುಗಳ ಬದಲಾವಣೆ ಉಂಟಾಗಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತವೆ (Infertility), ಅಲ್ಲದೇ Childhood Asthma (ಮಕ್ಕಳ ಅಸ್ತಮಾ), Cardiovascular disease (ಹೃದಯ ರಕ್ತನಾಳ ಖಾಯಿಲೆ), Central Neuro System Dysfunction (ಕೇಂದ್ರ ನರಮಂಡಲಗಳ ಸ್ಥಗಿತ), Low immunity (ಕಡಿಮೆ ರೋಗನಿರೋಧಕ ಶಕ್ತಿ), Neurological problems (ನರ ಸಂಬಂಧಿ ಖಾಯಿಲೆಗಳು) ನಂತಹ ಅಪಾಯಕಾರಿ ರೋಗಗಳು ಕಾಣಿಸತೊಡಗುತ್ತವೆ.

ಅಲ್ಲದೇ ಈ ಅಪಾಯಕಾರಿ ರಾಸಾಯನಿಕಗಳು ಸುಮಾರು 52 ಬಗೆಯ ಕ್ಯಾನ್ಸರ್ ಉಂಟುಮಾಡಬಲ್ಲವಾಗಿವೆ! ಈಗ ಹೇಳಿ ಪ್ಲಾಸ್ಟಿಕ್ ಡಬ್ಬದ ಊಟ ಬದುಕಲಾ ಅಥವಾ ಸಾಯಲಾ.

ನಾವೇನು ಕೊಡುತ್ತೇವೋ ಅದೇ ನಮಗೆ ವಾಪಾಸ್ ಸಿಗುತ್ತದೆ. ವಿಷ ಕೊಟ್ಟವನಿಗೆ ಸಿಗುವುದು ಕೂಡಾ ವಿಷವೇ. ಪೃಕೃತಿಯ ಕೊಂದು ಬದುಕುವ ಹುಚ್ಚು ಆಸೆ ಬಿಟ್ಟಾಗಲೇ ಬದುಕು ಸಮತೋಲನಕ್ಕೆ ಬರುವುದು. ಪ್ರತಿಯೊಂದಕ್ಕೂ ಪರ್ಯಾಯ ಎಂಬುದು ಇದ್ದೇ ಇರುತ್ತದೆ ಹುಡುಕುವ ಇಚ್ಛೆ ಇರಬೇಕಷ್ಟೆ.

ಬದುಕು ಪ್ರತೀ ಜೀವಿಯ ಹಕ್ಕು. ಎಲ್ಲಾ ತನಗೊಬ್ಬನಿಗೆ ಮಾತ್ರ ಎಂಬ ಸ್ವಾರ್ಥ ಈಗ ಕಾಣದ ಕ್ರಿಮಿಗಳೆಲ್ಲಾ ಜೀವ ಹಿಂಡಿ ಕೊಲ್ಲುವ ಕಾಲಕ್ಕೆ ತಂದು ನಿಲ್ಲಿಸಿದೆ. ಇಂದಿನ ಕಾಳಜಿಯೇ ಮುಂದಿನ ಅವಕಾಶ, ಮುಂದಿನ‌ ಪೀಳಿಗೆಗೆ ಏನಾದರೂ ಇಟ್ಟು ಹೊರಡುವ ಮನಸ್ಸಿದ್ದರೆ ಪರಿಶುದ್ಧ ಪೃಕೃತಿಗಿಂತ ಆಸ್ತಿ ಮತ್ತೊಂದಿಲ್ಲ

LEAVE A REPLY

Please enter your comment!
Please enter your name here